ರಾಮದಾಸ
	1608-81. ಸಮರ್ಥ ರಾಮದಾಸ ಎಂದು ಪ್ರಸಿದ್ಧನಾದ ಮಹಾರಾಷ್ಟ್ರದ ಒಬ್ಬ ಸಂತ. ಪೂರ್ವಾಶ್ರಮದ ಹೆಸರು ನಾರಾಯಣ. ರಾಮದಾಸನ ಪೂರ್ವಜರು ಠೋಸರ್ ಮನೆತನದವರು. ಈತನ ತಂದೆ ಸೂರ್ಯಾಜಿ ಪಂತ ಠೋಸರ್, ತಾಯಿ ರಾಣೂಬಾಯಿ. ಸಹೋದರ ಗಂಗಾಧರ. ಬಾಲ್ಯದಲ್ಲಿ ರಾಮದಾಸ ಬಹಳ ತುಂಟನಾಗಿದ್ದ. ಅಧ್ಯಯನದಲ್ಲಿ ಚುರುಕಾಗಿದ್ದರೂ ತುಂಟತನ ಹೆಚ್ಚಾಗಿತ್ತು. ಅಧ್ಯಯನದಲ್ಲಿ ಚುರುಕಾಗಿದ್ದರೂ ತುಂಟತನ ಹೆಚ್ಚಾಗಿತ್ತು. ಈತನ ಜನ್ಮಸ್ಥಳ ಜಾಂಬಗಾವ್ ತುಂಬ ಪ್ರಸಿದ್ಧಿಯಲ್ಲಿತ್ತು. ಅಲ್ಲಿಯ ಆಂಜನೇಯ ಸ್ವಾಮಿ ಈತನ ಆರಾಧ್ಯದೇವತೆ. ಅಲ್ಲಿಯೇ ಈತನಿಗೆ ರಾಮನ ದರ್ಶನವಾಯಿತೆಂದು ಹೇಳಲಾಗಿದೆ. ಮದುವೆ ಮಾಡಿದರೆ ಮಗನ ತುಂಟತನ ಕಡಿಮೆಯಾಗಬಹುದೆಂದು ತಾಯಿ ರಾಣೂಬಾಯಿ ಮದುವೆಯನ್ನು ಏರ್ಪಡಿಸಿದಳು. ಮದುವೆಯ ಮಂಟಪದಲ್ಲಿ ಮಂಗಳಾಷ್ಟಕ ಆರಂಭವಾಗಿ ದ್ವಿಜರು ಸುಮೂಹೂರ್ತಾ ಸಾವಧಾನ ಎನ್ನುತ್ತಿದ್ದಂತೆಯೆ ನಾರಾಯಣ ಲಗ್ನಮಂಪಟದಿಂದ ಹೊರಗೆ ಹೊರಟುಹೋದ. ಲಗ್ನಮಂಟಪದಿಂದ ಹೊರಟ ನಾರಾಯಣ ಗೋದಾವರಿ-ನಂದಿನೀ ಸಂಗಮ ಕ್ಷೇತ್ರ, ನಾಸಿಕ್ ಮುಂತಾಗಿ ಅನೇಕ ಕಡೆಗಳಲ್ಲಿ ನಿಂತು ತಪಸ್ಸನ್ನಾಚರಿಸಿದ. ಗೋದಾವರೀ ತೀರದಿಂದ ಹಿಮಾಲಯದ ಬದರೀ ಕ್ಷೇತ್ರದವರೆಗೆ ಸಂಚಾರಮಾಡಿ. ಅಲ್ಲಿಂದ ದಕ್ಷಿಣದ ಎಲ್ಲ ಪ್ರಸಿದ್ಧಕ್ಷೇತ್ರಗಳಿಗೂ ಹೋಗಿ ತಾಯಿಯ ದರ್ಶನಕ್ಕೆಂದು ಪುನಃ ಜಾಂಬಗಾವ್‍ಗೆ ಬಂದ. ವಯೋವೃದ್ಧೆ ತಾಯಿಯ ದರ್ಶನ ಹಾಗೂ ಆಕೆಯ ಆಶೀರ್ವಾದ ಪಡೆದು ಮತ್ತೆ ಹೊರಟು ಕೃಷ್ಣಾತೀರದ ಅನೇಕ ಸ್ಥಳಗಳಲ್ಲಿ ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಲ್ಲದೆ ಜಾಫಳ್ ಗ್ರಾಮದಲ್ಲಿ ರಾಮ ಮಂದಿರವನ್ನು ಕಟ್ಟಿಸಿ ಅಲ್ಲಿಯೇ ನಿಂತ. ಈ ರಾಮಮಂದಿರಕ್ಕೆ ಶಿವಾಜಿ ಮಹಾರಾಜ ಹಾಗೂ ಆದಿಲ್ ಷಾಹೀ ರಾಜರು ಮತ್ತು ಅನೇಕ ಧನಿಕರು ದಾನದತ್ತಿಗಳನ್ನು ಕೊಟ್ಟಿದ್ದಾರೆ.

	ಏಕದೇವತಾ ಉಪಾಸನೆಗಳನ್ನೂ ಭಕ್ತಿಮಾರ್ಗದ ಮೂಲಕ ಪರಮಾತ್ಮನ ಕಡೆಗೆ ಚಿತ್ತವನ್ನು ಹರಿಸಲು ಅವಶ್ಯವಾದ ಪದ್ಧತಿಯನ್ನೂ ನಿರೂಪಿಸಿದ. ಇದನ್ನು ರಾಮದಾಸೀ ಸಂಪ್ರದಾಯ, ಶ್ರೀ ಸಂಪ್ರದಾಯ, ಸಮರ್ಥಸಂಪ್ರದಾಯ, ದಾಸ ಸಂಪ್ರದಾಯ, ಮಹಾರಾಷ್ಟ್ರಧರ್ಮ ಮತ್ತು ರಾಘವನ ಧರ್ಮ ಮುಂತಾದ ಹಲವು ಹೆಸರುಗಳಿಂದ ಗುರುತಿಸಲಾಗುತ್ತದೆ. ಈ ಸಂಪ್ರದಾಯದ ಕಾರ್ಯ, ಕಾರ್ಯೋದ್ದೇಶ, ಸಮಾಜ ಮತ್ತು ಉಪಾಸ್ಯ ಸಂಗತಿ ಇವುಗಳನ್ನು ನಿರ್ಧರಿಸಿದ ಮೇಲೆ ರಾಮದಾಸ ಅದರ ಪ್ರಸಾರಣೆಗೆಂದು ಮಠ, ಮಹಂತ, ದಿನಚರ್ಯೆ ಇತ್ಯಾದಿಗಳ ರೀತಿನೀತಿಗಳನ್ನು ರೂಪರೇಷೆಗಳನ್ನೂ ಸಂಯೋಜಿಸಿದ.  ರಾಷ್ಟ್ರೀಯ ಸ್ತರದಲ್ಲಿ ಈ ಸಮಾಜದ ಸಂಘಟನೆಯನ್ನೂ ಮಾಡಿದ. ರಾಮದಾಸೀ ಪಂಥದಲ್ಲಿ ದ್ವೈತಾದ್ವೈಗಳ ಸಮನ್ವಯವಿದೆ.
	
ರಾಮದಾಸನ ವಾಙ್ಮಯವೂ ವಿಪುಲವಾಗಿದೆ. ದಾಸಬೋಧ, ರಾಮಾಯಣ, ಪಂಚವೀಸ ಪ್ರಶ್ನವ ಪಂಚೀಕರಣಾದೀ ಅಭಂಗ, ದ್ವಾದಶ ಓವೀ ಶತಕ, ಕರುಣಾಷ್ಟಕ-ಇವು ಇವನ ಕೃತಿಗಳು. ಇವುಗಳಲ್ಲಿ ದಾಸಬೋಧ ಪ್ರಸಿದ್ಧವಾದುದು. ಕನ್ನಡಕ್ಕೆ ಭಾಷಾಂತರಗೊಂಡಿದೆ. ಪ್ರಪಂಚ ಹಾಗೂ ಪರಮಾರ್ಥಗಳ ಸಮನ್ವಯವೇ ಈ ಕೃತಿಯ ಸಿದ್ಧಿ ಹಾಗೂ ಸಾಧನಗಳು.	
		                  (ಎಸ್.ಎಸ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ